ಬೀದರ್

ವೈವಿಧ್ಯಮಯ ಸಂಸ್ಕ್ರತಿ, ಭಾವೈಕ್ಯತೆಯ ನಾಡು ಕರ್ನಾಟಕ :ಸಚಿವ ಈಶ್ವರ ಬಿ.ಖಂಡ್ರೆ

ಬೀದರ. ನವೆಂಬರ್ 1 :- ಅನೇಕ ಮಹನೀಯರ ಹೋರಾಟದ ಫಲವಾಗಿ ಭಾಷವಾರು ಪ್ರಾಂತ್ಯಗಳ ಮೇಲೆ ರಚನೆಯಾದ ಕನ್ನಡಿಗರ ನಾಡಾಗಿ ಕರ್ನಾಟಕವು ಉದಯವಾಗಿದೆ. ಕರ್ನಾಟಕವು ವೈವಿಧ್ಯಮಯ ಸಂಸ್ಕೃತಿ, ಭಾವೈಕ್ಯತೆಯ ನಾಡಾಗಿದ್ದು. ಮೈಸೂರು ರಾಜ್ಯದಿಂದ ಕರ್ನಾಟಕವೆಂದು ಮರುನಾಮಕರಣ ಪಡೆದು ಇಂದಿಗೆ 50ರ ವಸಂತ ಪೂರೈಸಿದೆ ಎಂದು ಅರಣ್ಯ, ಜೈವಿಕ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಹೇಳಿದರು. ಅವರು ಬುಧವಾರ ಜಿಲ್ಲಾಡಳಿತ ಬೀದರ ವತಿಯಿಂದ ಕರ್ನಾಟಕ ರಾಜ್ಯೋತ್ಸವ ನಿಮಿತ್ಯ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕನ್ನಡ ಭಾಷೆಯ ಉಳಿಸಲು ಅಂದು ಬೀದರ ಜಿಲ್ಲೆಯ ಅನೇಕ ಮಹನೀಯರು ಹೋರಾಟ ಮಾಡಿದ್ದಾರೆ. ಕನ್ನಡನಾಡಿನ ಇತಿಹಾಸ, ಪರಂಪರೆ, ಸಾಂಸ್ಕೃತಿಕ ಹಿರಿಮೆಯು ತುಂಬಾ ವೈಶಿಷ್ಟತೆಗಳಿಂದ ಕೂಡಿದೆ. ರಾಜ-ಮಹಾರಾಜರು ಸಹ ತಮ್ಮ ಆಡಳಿತದ ಕಾಲಾವಧಿಯಲ್ಲಿ ಕನ್ನಡನಾಡು-ನುಡಿ ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರು ಹೇಳುವಂತೆ ಕರ್ನಾಟಕವು ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಕನ್ನಡ ನಾಡಿನ ಪ್ರಗತಿಯಲ್ಲಿ ರಾಜ ಮಹಾರಾಜರು, ಆಡಳಿತಗಾರರು, ವಿಜ್ಞಾನಿಗಳು, ಎಂಜಿನಿಯರುಗಳು ಸಾಹಿತಿಗಳು, ವಚನಕಾರರು ಹಾಗೂ ದಾಸ ಸಾಹಿತ್ಯದ ಪಾತ್ರವು ಅತೀ ಮಹತ್ವದ್ದಾಗಿದೆ. ಕರ್ನಾಟಕ ಅಂದು ಐತಿಹಾಸಿಕವಾಗಿ ಖ್ಯಾತಿ ಪಡೆದಿದ್ದು, ಇಂದು ವೈಜ್ಞಾನಿಕವಾಗಿ ತಾಂತ್ರಿಕವಾಗಿ ಖ್ಯಾತಿ ಪಡೆದಿದೆ. ಕನ್ನಡನಾಡಿನಲ್ಲಿ ಇಸ್ರೋದಂತಹ ಸಂಸ್ಥೆಗಳಿವೆ ಚಂದ್ರಯಾನ, ಮಂಗಳಯಾನ, ಗಗನಯಾನದಂತಹ ಬಾಹ್ಯಾಕಾಶ ಕಾರ್ಯಕ್ರಮಗಳ ನಿಯಂತ್ರಣ ನಡೆಯುವುದೇ ಇಲ್ಲಿಂದ. ಎಚ್.ಎ.ಎಲ್. ಲಘು ಯುದ್ಧ ವಿಮಾನ ತೇಜಸ್ ನಿರ್ಮಾಣ ಮಾಡುತ್ತಿದೆ. ಇನ್ನು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಕರುನಾಡಿಗರ ಕೊಡುಗೆ ದೇಶ ವಿದೇಶಗಳಲ್ಲೂ ಹಬ್ಬಿದೆ ಎಂದು ಹೇಳಿದರು. ನಮ್ಮ ಭಾಗವು ಸಮಾಜಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಕಾಣಬೇಕಾದರೆ ಪ್ರಾದೇಶಿಕ ಅಸಮಾನತೆ ತೊಲಗಬೇಕು. ಹಿಂದೆ ಅನೇಕ ನಾಯಕರು ಈ ಭಾಗದ ಪ್ರಾದೇಶಿಕ ಅಸಮಾನತೆ ಹಾಗೂ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ ಅವರ ಹೋರಾಟದ ಫಲವಾಗಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ 371(ಜೆ) ವಿಶೇಷ ಸ್ಥಾನಮಾನ 2013 ರಲ್ಲಿ ಜಾರಿಗೆ ತರಲಾಯಿತು. 371 (ಜೆ) ಮೀಸಲಾತಿಯಿಂದಾಗಿ ಈ ಭಾಗದಲ್ಲಿ ಅಭ್ಯರ್ಥಿಗಳು ವೈದ್ಯಕೀಯ, ಇಂಜಿನೀಯರಿಂಗ್ ಸೀಟ್ ಪಡೆಯುವವರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿ. ಅದೇ ರೀತಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಉದ್ಯೋಗಗಳಲ್ಲಿ ್ಲ ಈ ಭಾಗದಲ್ಲಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತೆ ಆಗಿದೆ. ಈ ಬಾರಿ ಆಯ-ವ್ಯಯದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಮೂರು ಸಾವೀರ ಕೋಟಿ ಅನುದಾನ ಮೀಸಲಿರಿಸಲಾಗಿದೆ. ಕಳೆದ ಬಾರಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಲ್ಲಿಂದ ಅನುದಾನವನ್ನು ಹಾಗೂ ಈ ಬಾರಿಯ ಅನುದಾನವನ್ನು ಮುಂದಿನ ದಿನಗಳಲ್ಲಿ ಕ್ರೀಯಾ ಯೋಜನೆ ರೂಪಿಸಿ ಸದ್ಬಳಕೆ ಮಾಡಿಕೊಳ್ಳಲಾಗುವುದು. ಈಗಾಗಲೇ ಅನುದಾನ ಮಂಜೂರಾತಿಗೆ ಸಂಬಂಧಿಸಿದಂತೆ ಮಾನ್ಯ ರಾಜ್ಯಪಾಲರಿಗೆ ಭೇಟಿ ಮಾಡಿ ಸಮಾಲೋಚನೆ ನಡೆಸಲಾಗಿದೆ ಎಂದರು. ನಮ್ಮ ಸರ್ಕಾರ ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕು ಯೋಜನೆಯನ್ನು ಈಗಾಗಲೇ ಜಾರಿಗೆ ತಂದಿದೆ. ಇನ್ನು ಬಾಕಿ ಇರುವ ಯುವನಿಧಿ ಯೋಜನೆಯನ್ನು ಬರುವ ಡಿಸೆಂಬರ್ ಅಥವಾ ಜನವರಿಯಲ್ಲಿ ಜಾರಿಗೆ ತರಲಾಗುವುದು. ಈಗ ಜಾರಿಗೆ ತಂದ ಶಕ್ತಿ, ಗೃಹ ಲಕ್ಷಿ್ಮೀ, ಗೃಹ ಜ್ಯೋತಿ, ಅನ್ಯಭಾಗ್ಯ ಯೋಜನೆಯ ಲಾಭವನ್ನು ಜಿಲ್ಲೆಯ ಲಕ್ಷಾಂತರ ಜನ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಯೋಜನೆಗಳು ಜಿಲ್ಲೆಯ ಹಾಗೂ ರಾಜ್ಯದ ಜನರ ಆರ್ಥಿಕ ಪ್ರಗತಿಗೆ ನಾಂದಿಯಾಗಲಿದೆ ಎಂದರು. ರಾಜ್ಯ ಸರ್ಕಾರದ ವಿವಿಧ ಇಲಾಖೆಯಲ್ಲಿರುವ ಹುದ್ದೆಗಳ ಭರ್ತಿಗೆ ನಮ್ಮ ಸರ್ಕಾರ ಈಗಾಗಲೇ ಕ್ರಮವಹಿಸುತ್ತಿದೆ. ಅದರಂತೆ ನಮ್ಮ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆನೆ. ಬೀದರ ಜಿಲ್ಲೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಅವರು ಶಾಲೆಗಳಿಗೆ ನಿಯೋಜನೆಗೊಳ್ಳುವವರೆಗು ಜಿಲ್ಲೆಯ ಯಾವುದೇ ಶಾಲೆಗೆ ಶಿಕ್ಷಕರ ಕೊರತೆಯಾಗಬಾರದು ಎಂಬ ನಿಟ್ಟಿನಲ್ಲಿ ಗೌರವ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಆರೋಗ್ಯ ಸಮಸ್ಯೆಯನ್ನು ನೀಗಿಸಲು ಬ್ರೀಮ್ಸ್ನಲ್ಲಿ ಕ್ಯಾತ್‌ಲ್ಯಾಭ್ ಹಾಗೂ ಟ್ರಾಮಾ ಸೆಂಟರ್ ಆರಂಭಿಸಲಾಗುವುದು. ನನ್ನ ಇಲಾಖೆಯಾದ ಅರಣ್ಯ ಇಲಾಖೆಯಿಂದ ಬೀದರ ಜಿಲ್ಲೆ ಹೆಚ್ಚು ಹಸಿರಿಲ್ಲದ ನಾಡು. ಇಲ್ಲಿನ ಹಸಿರು ಹೊದಿಕೆ ಅಂದರೆ ಅರಣ್ಯ ಮತ್ತು ಗ್ರೀನ್ ಕವರ್ ಅತ್ಯಂತ ಕಡಿಮೆ ಇದೆ. ಹೀಗಾಗಿಯೇ ನಮ್ಮ ಬೀದರ್ ಅನ್ನು ಹಸಿರು ಬೀದರ್ ಮಾಡಲು ಸಂಕಲ್ಪಿಸಲಾಗಿದೆ. ಪ್ರಾದೇಶಿಕ ಅರಣ್ಯ ವಿಭಾಗದಲ್ಲಿ 2023ರ ಮಳೆಗಾಲದಲ್ಲಿ ಸಾಮಾಜಿಕ ಮತ್ತು ಪ್ರಾದೇಶಿಕ ಅರಣ್ಯ ವಿಭಾಗಗಳಿಂದ 15 ಲಕ್ಷ ಸಸಿಗಳನ್ನು ನೆಡಲಾಗಿದೆ. ಮುಂಬರುವ 2024ರ ಮಳೆಗಾಲದಲ್ಲಿ 20 ಲಕ್ಷ ಸಸಿಗಳು ನೆಡುವ ಗುರಿ ಹಮ್ಮಿಕೊಳ್ಳಲಾಗಿದೆ. ಬೀದರ ಜಿಲ್ಲೆಯಲ್ಲಿ ಕೃಷ್ಣ ಮೃಗ ಮೀಸಲು ಧಾಮಕ್ಕಾಗಿ 2 ಕೋಟಿ ರೂ. ಮೀಸಲಿಡಲಾಗಿದೆ. ಅರಣ್ಯ ಅಧಿಕಾರಿಗಳಿಗೆ ತರಬೇತಿ ನೀಡುವ ತರಬೇತಿ ಕೇಂದ್ರವನ್ನು ಬೀದರ ಜಿಲ್ಲೆಯಲ್ಲಿ ಆರಂಭಿಸುವ ಉದ್ದೇಶದಿಂತ ಐದು ಕೋಟಿ ರೂ. ಮೀಸಲಿಡಲಾಗಿದೆ. ಬೀದರ ಜಿಲ್ಲೆಯ ಭಾಲ್ಕಿ ಅರಣ್ಯ ವಲಯದಲ್ಲಿ ಒಂದು ಹೊಸ ಸಸ್ಯೋದ್ಯಾನ (ಟ್ರೀ ಪಾರ್ಕ) ನಿರ್ಮಾಣ ಹಾಗೂ ದೇವ ದೇವ ವನ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯಿಂದ ಕನ್ನಡ ನಾಡು, ನುಡಿ ಬಿಂಬಿಸುವ ಸ್ತಬ್ಧ ಚಿತ್ರ ಮೆರವಣಿಗೆ ಹಾಗೂ ವಿವಿಧ ಶಾಲಾ ಕಾಲೇಜು ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಮತ್ತು ಕರ್ನಾಟಕ್ಕೆ 50 ವರ್ಷಗಳು ತುಂಬಿರುವದರಿಂದ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಎಲ್ಲಾದರೂ ಇರು ಎಂತಾದರು ಇರು, ಒಂದೆ ಕರ್ನಾಟಕ ಒಂದೆ, ಹೊತ್ತಿತೋ ಹೊತ್ತಿತೋ ಕನ್ನಡದ ದೀಪ ಹಾಗೂ ಹೆಸರಾಯಿತು ಕನ್ನಡ ಉಸಿರಾಗಲಿ ಕನ್ನಡ ಎಂಬ ಗೀತೆಗಳನ್ನು ಹಾಡಲಾಯಿತು.


ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 17 ಜನ ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿ ಪಡೆದವರ ವಿವರ: ಪತ್ರಿಕಾ ಮಾಧ್ಯಮ ಕ್ಷೇತ್ರದಿಂದ ಶ್ರೀ ಪ್ರದೀಪ ತಂದೆ ಅಮರ ಬಿರಾದಾರ, ಸಾಹಿತ್ಯ ಕ್ಷೇತ್ರದಿಂದ ಶ್ರೀಮತಿ ಚಿನ್ನಮ್ಮಾ ವಲ್ಲೇಪೂರೆ ಗಂಡ ಹಣಮಂತ, ರಜೀಯಾ ಬಳಬಟ್ಟಿ ಮಸ್ತನ್ ಸಾಬ್, ಶ್ರೀ ಸುರೇಂದ್ರ ತಂದೆ ಸಂಗಪ್ಪಾ ಹೊಡಮನಿ, ಜಾನಪದ ಕ್ಷೇತ್ರದಿಂದ ಶ್ರೀ ಶರಣಪ್ಪಾ ತಂದೆ ಮಾಣಿಕಪ್ಪಾ, ಸಂಗೀತ ಕ್ಷೇತ್ರದಿಂದ ಶ್ರೀ ಮೋಹನ ಮಿಲಿಂದ ತಂದೆ ಕಿಶನರಾವ ಕಾಂಬಳೆ, ಕನ್ನಡ ನಾಡು ನುಡಿ ಕ್ಷೇತ್ರದಿಂದ ಶ್ರೀ ಶಂಕ್ರೇಪ್ಪಾ ತಂದೆ ಭೀಮಾರಾವ್ ಬಿರಾದಾರ, ಶ್ರೀ ಶಂಕರಾವ ಹೊನ್ನಾ ತಂದೆ ವೀರ ಸಂಗಪ್ಪಾ ಮತ್ತು ಶ್ರೀ ಪೀಟರ್ ಚಿಟಗುಪ್ಪಾ ತಂದೆ ಸೈಮನ್, ಸಮಾಜ ಸೇವೆ ಕ್ಷೇತ್ರದಿಂದ ಶ್ರೀ ಸಂಗಮೇಶ್ವರ ಜ್ಯಾಂತೆ ತಂದೆ ಬಾಬುರಾವ ಜ್ಯಾಂತೆ, ಸಾಮಾಜಿಕ ಕ್ಷೇತ್ರದಿಂದ ಶ್ರೀ ಸುಬ್ಬಣ್ಣ ತಂದೆ ಶಿವಪ್ಪಾ ಕರಕನಳ್ಳಿ, ಸಮಾಜ ಸೇವೆ ಕ್ಷೇತ್ರದಿಂದ ಶ್ರೀ ಅಭಿ ಕಾಳೆ ತಂದೆ ತಿಪ್ಪಣ್ಣ ಕಾಳೆ, ಚಿತ್ರಕಲೆ ಕ್ಷೇತ್ರದಿಂದ ಶ್ರೀ ಶರದ ಕುಲಕರ್ಣಿ, ಕನ್ನಡ ನಾಡು ನುಡಿ ಕ್ಷೇತ್ರದಿಂದ ಶ್ರೀ ಬಸವರಾಜ ಬಶೆಟ್ಟಿ ತಂದೆ ಸಂಗ್ರಾಮಪ್ಪ, ಸಮಾಜ ಸೇವೆ ಕ್ಷೇತ್ರದಿಂದ ಶ್ರೀ ಮಹೇಶ ಗೋರನಾಳಕಾರ ತಂದೆ ಮಾಣಿಕಪ್ಪಾ, ಶ್ರೀಮತಿ ಛಾಯಾ ಶಿವಕುಮಾರ ನಾಗವಾರ ಹಾಗೂ ಶ್ರೀ ಸಂಗಮೇಶ ತಂದೆ ಬಸಪ್ಪಾ ಗುಮ್ಮೆ ಅವರಿಗೆ ಪ್ರಶಸ್ತಿ ಲಭಿಸಿದೆ.
ಆದರಂತೆ ಕು. ಶಿವಾನಿ ತಂದೆ ಶಿವದಾಸ ಸ್ವಾಮಿ ಇವರು ಇಂಡಿಯನ್ ಐಡಿಯಲ್‌ಗೆ ಆಯ್ಕೆಯಾಗಿ ಕರ್ನಾಟಕ ರಾಜ್ಯಕ್ಕೆ ಹೆಮ್ಮೆ ತಂದಿರುವ ಹಿನ್ನಲೆಯಲ್ಲಿ ವಿಶೇಷ ಸನ್ಮಾನ ಮಾಡಲಾಯಿತು.
ಈ ಸಂದಭದಲ್ಲಿ ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಂ ಖಾನ್, ಬೀದರ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ವಿಧಾನ ಪರಿಷತ ಸದಸ್ಯರುಗಳಾದ ರಘುನಾಥರಾವ ಮಲ್ಕಾಪೂರೆ, ಅರವಿಂದಕುಮಾರ ಅರಳಿ, ಬೀದರ ನಗರಸಭೆ ಅಧ್ಯಕ್ಷ ಮೊಹಮ್ಮದ ಗೌಸ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ.ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್., ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ ಮೇಘಣ್ಣನವರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ ಅಧ್ಯಕ್ಷ ಸುರೇಶ ಚನ್ನಶೇಟ್ಟಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು-ಸಿಬ್ಬಂಧಿಗಳು, ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು-ಶಿಕ್ಷಕರು ಹಾಗೂ ಜಿಲ್ಲೆಯ ಸಾರ್ವಜನಿಕರು ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!