ಬೀದರ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ರಾಜ್ಯಕ್ಕೆ ಮಾದರಿ: ಗುರುನಾಥ ಜಾಂತಿಕರ
ಬೀದರ: ಬೀದರ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ರಾಜ್ಯದಲ್ಲಿಯೇ ಮಾದರಿ ಸಹಕಾರಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕ ಗುರುನಾಥ ಜಾಂತಿಕರ ಹೇಳಿದರು.
ನಗರದ ಸಾರ್ಥ್ಯ ಕೇಂದ್ರ, ಕಲ್ಯಾಣ ಪತ್ತಿನ ಸೌಹಾರ್ದದಲ್ಲಿ ನಡೆದ ಬೀದರ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ 15ನೇ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿಯೇ ಮೊದಲ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ಬೀದರ ಜಿಲ್ಲೆಯಲ್ಲಿ ರಚನೆಯಾಗಿದ್ದು, ಒಕ್ಕೂಟವು ಸಹಕಾರ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ಹೇಳಿದರು.
ಸಭೆಯ ಆರಂಭದಲ್ಲಿ ಹಿರಿಯ ಸಹಕಾರಿ ಧುರೀಣರಾದ ಭೀಮಣ್ಣ ಖಂಡ್ರೆ ಹಾಗೂ ಸಾಯಿ ಸೌಹಾರ್ದ ಸಹಕಾರಿಯ ಶಂಕರ ಗೌಳಿ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಒಕ್ಕೂಟದ ನಿರ್ದೇಶಕ ರಾಜಶೇಖರ ನಾಗಮೂರ್ತಿ ಸಭೆಯನ್ನು ನಡೆಸಿಕೊಟ್ಟರು. ಸಹಕಾರ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.
ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮೃತ ಹೊಸಮನಿ ಅವರು ಸಭೆಯ ನೋಟಿಸ್, ಕೋರಂ ಹಾಗೂ ಗೈರುಹಾಜರಾತಿ ಕುರಿತು ಮಾಹಿತಿ ನೀಡಿದರು. ಶ್ರೀಕಾಂತ ಸ್ವಾಮಿ ಸ್ವಾಗತ ಹಾಗೂ ಪರಿಚಯ ನೆರವೇರಿಸಿದರು.
2025-26ನೇ ಸಾಲಿನ ಲೆಕ್ಕಪರಿಶೋಧನಾ ವರದಿಯನ್ನು ಸಂಜಯ ಕ್ಯಾಸ್, ವಾರ್ಷಿಕ ವರದಿಯನ್ನು ಬಸವರಾಜ ಹುಡಗೆ ಮಂಡಿಸಿದರು. 2026-27, 2027-28 ಹಾಗೂ 2028-29ನೇ ಸಾಲಿನ ಕ್ರಿಯಾ ಯೋಜನೆಯನ್ನು ಸಂಜೀವಕುಮಾರ ಸಜ್ಜನ್ ಮಂಡಿಸಿದರು. 2025-26ನೇ ಸಾಲಿನ ಸದಸ್ಯತ್ವ ಪಟ್ಟಿಯನ್ನು ಶಿವಬಸಪ್ಪ ಚನಮಲೆ ಮಂಡಿಸಿದರು.
2026-27, 2027-28 ಹಾಗೂ 2028-29ನೇ ಸಾಲಿನ ಅಂದಾಜು ಆಯ-ವ್ಯಯವನ್ನು ಮಾಯಾದೇವಿ ಮಂಡಿಸಿ ಸಭೆಯ ಅನುಮೋದನೆ ಪಡೆದರು. 2026-27ನೇ ಸಾಲಿನ ಲೆಕ್ಕಪರಿಶೋಧಕರ ನೇಮಕಾತಿ ಕುರಿತು ರಾಜಶೇಖರ ನಾಗಮೂರ್ತಿ ಮಾಹಿತಿ ನೀಡಿದರು.ಸಂಜೀವಕುಮಾರ ಬಿ. ಪಾಟೀಲ್ ನಿರೂಪಿಸಿದರು. ಶ್ರೀಕಾಂತ ಸ್ವಾಮಿ ವಂದಿಸಿದರು.

